Followers

Thursday 20 June 2013

ಛೇ..ಛೇ...ಏನಿದು ವರುಣಾ…



ಛೇ..ಛೇ...ಏನಿದು ವರುಣಾ
ಮೊದಲು ಮುತ್ತಿನ ಮಳೆಗೆರೆದೆ
ಪ್ರೀತಿಯ ಉತ್ತುಂಗಕ್ಕೇರಿಸಿ  ಇಂದು 
ನೀನ್ಯಾಕೆ ಆ ಮತ್ತಿನಲಿ ಮುತ್ತೂ ಕಾಣದಂತೆ
ಎಲ್ಲವನು ಕೊಚ್ಚಿಕೊಂಡು ಹೋದೆ??? 

ಎಷ್ಟು ಹುಡುಕಿದರೂ ಸಿಗುತ್ತಿಲ್ಲವಲ್ಲಾ
ಆ ನನ್ನ ಪುಟ್ಟು ಅರಮನೆ..
ಗುರುತು ಸಿಗದಷ್ಟು ಬದಲಾಯಿಸಿ ಬಿಟ್ಟೆ
ನಿಲ್ಲಿಸು ಹರಿಯುವುದ ಒಂದೇ ಸವನೆ.

ಇದು ನಿನ್ನ ಸೇರುವ ಭುವಿಯ 
ಹಂಬಲ ತೀರಿಸುವ ಪರಿ ಏನು??
ಒಡಲ ಬಿರಿದು, ಎಲ್ಲೆಡೆಗೂ ಹರಿದು
ಈಗ ಸುಮ್ಮನೆ ನೋಡುತ್ತಿರುವೆ ಏನು?? 

ಹೇ ವರುಣ...ಇನ್ನು ಈ ಇಳೆ ತಾಳಲಾರಳು ನಿನ್ನ ಪ್ರಕೋಪ .
ತತ್ತರಿಸಿ ,ದಿಕ್ಕುಗಾಣದೆ ಅಲೆಯುತಿಹರು
ಕೇಳಲಾರೆಯಾ ಅವರೆಲ್ಲರ ಪ್ರಲಾಪ??? 

ಚಂದಾ / ಸವಿತಾ ಇನಾಮದಾರ್.

8 comments:

  1. ಹೂಂ... ನಾವಿಲ್ಲಿ ಅರಾಮಾಗಿ ಕುಳಿತಿದ್ದೇವೆ..ಪಾಪ... ರಜೆಯಲ್ಲಿ ಮಜಾ ಮಾಡಲು, ದೇವರ ದರ್ಶನಕ್ಕೆಂದು ಹೋದವರು ಇಹಲೋಕ ತ್ಯಜಿಸಿದ್ದು ನೋಡಿ ಮನಸಿನಲ್ಲಿ ಒಂದೇ ಪ್ರಶ್ನೆ ಮೇಲಿಂದಾ ಮೇಲೆ ಬರ್ತಾ ಇದೆ... ಜೀವನ ಎಷ್ಟು ಕ್ಷಣಿಕ ಎಂದು... ಇಂದು ಇದ್ದದ್ದು ನಾಳೆ ಮಾಯವಾಗುತ್ತೆ.. ಆದರೂ ಮೋಹ ಮಾಯಾ ಜಾಲದಲ್ಲಿ ಮನುಜನ ಜೀವನ ಸುತ್ತುತ್ತಾ ಇರುತ್ತೆ.. ಅಲ್ವೆ??..

    ReplyDelete
  2. ಅಕ್ಕಾ, ಎಲ್ಲಿ ಸಿಕ್ಕರೆ ಅಲ್ಲಿ ಆಕ್ರಮಿಸಿ ನೆಲೆ ಉರುವ ನಮ್ಮ ಸ್ವಾರ್ಥ ಬುದ್ಧಿಗೆ ಇದು ಗಂಗಾ ಮಾಯಿಯ ಎಚ್ಚರಿಕೆ ಗಂಟೆ. ನದಿ ಪಾತ್ರಗಳನೆಲ್ಲ ನುಂಗಿ ನೀರು ಕುಡಿವ ಇಮಾರತುಗಳು ನೆಲ ಸಮವಲ್ಲಿ.

    ಒಳ್ಳೆಯ ಕವನ ಇದು, ಮತ್ತು ಒಳ್ಳೆಯ ಪ್ರಶ್ನೆ:
    ನೀನ್ಯಾಕೆ ಆ ಮತ್ತಿನಲಿ ಮುತ್ತೂ ಕಾಣದಂತೆ
    ಎಲ್ಲವನು ಕೊಚ್ಚಿಕೊಂಡು ಹೋದೆ???

    ReplyDelete
  3. ಪ್ರಕೃತಿ ವಿಕೋಪ ನೋಡಿ, ಹೃದಯ ಕರಗಿ, ಮನದಲ್ಲಿ ಚೆನ್ನಾಗಿ ಮಂಥಿಸಿ ಕಾವ್ಯ ರಚನೆ ಮಾಡಿದ್ದೀರಿ.
    ತುಂಬಾ ಇಷ್ಟವಾಯಿತು ನೀವು ಕೇಳುವ ರೀತಿ "ನೀನ್ಯಾಕೆ ಆ ಮತ್ತಿನಲಿ ಮುತ್ತೂ ಕಾಣದಂತೆ ಎಲ್ಲವನು ಕೊಚ್ಚಿಕೊಂಡು ಹೋದೆ?". ಮುತ್ತು ಕೊಟ್ಟವನೇ ಮತ್ತಿನಲಿ ವಿನಾಶ ಮಾಡುವುದನ್ನು ನೀವು ಹೇಳಿರುವುದು "ಬೇಲಿಯೇ ಎದ್ದು ಹೊಲ ಮೇಯ್ದರೆ ..." ಜ್ಞಾಪಿಸುತ್ತದೆ. ನಿಮ್ಮ ಕವ್ಯಾತ್ಮಕ್ಕೊಂದು ನಮನ.

    ಸೂ: "ಸವನೆ" ಪದ ಗ್ರಾಮ್ಯ ಭಾಷೆಯಲ್ಲಿ ಉಪಯೋಗವಿದ್ದರೂ, ನಿಮ್ಮ ಕಾವ್ಯದಲ್ಲಿ ಬೇರೆಲ್ಲೂ ಉಪಯೋಗಿಸದೆ ಇರುವುದರಿಂದ "ಸಮನೆ" ಒಳ್ಳೆಯ ಪ್ರಯೋಗವೇನೋ ಎನ್ನುವುದು ನನ್ನ ಅನಿಸಿಕೆ.

    ReplyDelete
    Replies
    1. ಕವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
      ನಿಜ..ನಮ್ಮ ಉತ್ತರ ಕನ್ನಡದಲ್ಲಿ ಸವನೆ ಅನ್ನೋ ಶಬ್ದ ಬಳಕೆಯಲ್ಲಿದೆ. ವರುಣನ ಆವೇಶದಿಂದ ಆಗುತ್ತಿದ್ದ ಅನಾಹುತಗಳನ್ನ ನೋಡಿದಾಗ ಭಾವನೆಯ ಭರದಲ್ಲಿ ಬರೆದ ಕವಿತೆ.

      Delete
  4. ಹೃತ್ಪೂರ್ವಕ ಧನ್ಯವಾದಗಳು Badarinath Palavalli bhai..ಎರಡು ದಿನಗಳ ಹಿಂದೆಯಷ್ಟೇ ಈ ಗಂಗಾ ಮಾತೆ ದಶಹರಾ ದಿನದಂದೇ ಭುವಿಗೆ ಇಳಿದಿದ್ದಳೆಂದು ಅವಳ ಹುಟ್ಟುಹಬ್ಬವನ್ನು ಎಲ್ಲರೂ ಆಚರಿಸಿದ್ದರು.. ಆದ್ರೆ ಅವಳಾಗಮನ ಈ ಪರಿಯಾಗುತ್ತೆಂದು ಯಾರೂ ನಿರೀಕ್ಷಿಸಿರಲಿಲ್ಲಾ.. ಛೇ..ಛೇ...ಹಿಮಾಲಯದ ರುದ್ರರಮಣೀಯ ನೋಟ ಇಂದು ಅಲ್ಲಿ ಭಯಾನಕ ರೌದ್ರ ತಾಂಡವದಂತೆ ಕಾಣೀಸ್ತಾ ಇದೆ.

    ReplyDelete
  5. ತಮ್ಮ ಮೆಚ್ಚುಗೆಗೆ ಧನ್ಯವಾದ Badari Narayana ji..
    ತಮ್ಮ ಮಾತನ್ನು ಒಪ್ಪುವೆ.. ಆದ್ರೆ ನಿಮಗೂ ಗೊತ್ತಿದ್ದ ಹಾಗೆ ಕವಿತೆಯ ರಚನೆ ಮಾಡುವಾಗ ನಮ್ಮ ನಮ್ಮ ಭಾಷೆ ತಿಳಿಯದಂತೆ ಒಳಗೆ ನುಸುಳಿ ಮನದಾಳದ ಮಾತನ್ನು ಹೊರ ಹೊಮ್ಮಿಸಿತ್ತವಲ್ಲವೆ?? ಹಾಗೆಯೇ ಈ - ಸವನೆ ಅನ್ನೋದು ನಮ್ಮಲ್ಲಿ ಸಾಮಾನ್ಯವಾಗಿ ಬಳಸುವ ಪದ.. ಅಲ್ಲಿನ ಜನರ ಗೋಳನ್ನು ನೋಡುತ್ತಾ, ದೇವರನ್ನು ಪ್ರಾರ್ಥಿಸುತ್ತಿದ್ದಾಗ ಬರೆದ ಕವನ ಇದು ಬದ್ರಿನಾರಾಯಣ್ ಜಿ..

    ReplyDelete
  6. ಒಳ್ಳೆಯ ಕವನ....ಆದರೆ ಮನುಷ್ಯ ಮಾಡಿದ ಪ್ರಕೃತಿಯ ಮೇಲಿನ ಅತ್ತ್ಯಾಚಾರದ ಫಲ ಇದು. ಈಗ ಪ್ರಲಾಪಿಸಿದರೇನು ಬಂತು?!ಪ್ರಕೃತಿ ಮುನಿದರೆ ಮಾರಿ ಎಂದು ತಿಳಿದೂ, ಮನುಷ್ಯ ಹೀಗೆ ಅವ್ಯಾಹತವಾಗಿ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಲೇ ಇದ್ದಾನೆ. ಅದರ ಪರಿಣಾಮವೇ ಇದು,ಎಂದು ಹೇಳಬಹುದು.........ಆದರೆ ಈಗ ಸಂತ್ರಸ್ಥರಾಗಿರುವ ಜನರ ಬಗ್ಗೆ ಸಂತಾಪ ಇಲ್ಲ ಎಂದಲ್ಲ.. ಅದು ಇದ್ದೆ ಇದೆ.ಆದರೆ ಜೊತೆಗೆ ಮನಸ್ಸನಿಲ್ಲಿ ಬರುವ ಸತ್ಯ "ಮಾಡಿದ್ದುಣ್ಣೋ ಮಾರಾಯ" ಈನ್ನುವ ಮಾತು,ಯೋಚನೆ ಅಷ್ಟೇ.......

    ReplyDelete
    Replies
    1. ನಿಮ್ಮ ಮಾತಿಗೆ ಒಪ್ಪಿದೆ ನಟರಾಜ್.. ಮನುಜನ ಮನಸೇ ಮರ್ಕಟದಂತಿದೆ ಅಲ್ವೇ??. ನಿಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಕ್ಕೆ ಹಾಗೂ ನನ್ನ ಕವನವನ್ನ ಮೆಚ್ಚಿದ್ದಕ್ಕೆ ಧನ್ಯವಾದಗಳು.

      Delete